ಇಂದು ತುಲಾಸಂಕ್ರಮಣ … ತಲಕಾವೇರಿಯಲ್ಲಿ ತೀರ್ಥೋದ್ಭವ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ದಟ್ಟ ಹಸಿರಿನ ಗಿರಿಕಂದರಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗೊಳಿಸುವ ಪ್ರಾಕೃತಿಕ ನೈಸರ್ಗಿಕ ತಾಣ ಕರ್ನಾಟಕದ ಒಂದು ಸುಂದರ ಜಿಲ್ಲೆ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು, ವನ್ಯರಾಶಿಗಳು, ಕಾಫಿ ತೋಟದ ಕಂಪು, ಕಿತ್ತಳೆ ಏಲಕ್ಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ ಧುಮುಕಿ ಹರಿವ ಜಲಪಾತಗಳು ಝಳುಝಳು ಹರಿವ ನದಿ ತೊರೆಗಳು ಹಾಗೂ ಪಚ್ಚೆಪೈರಿನಿಂದ ಆವೃತ್ತವಾದ ಕೊಡಗಿನ ಮೂಲೆ ಮೂಲೆಗಳಲ್ಲಿಯು ನೈಸರ್ಗಿಕ ಸೊಬಗಿದೆ. ಪ್ರಕೃತಿಯ ಲಾಲಿತ್ಯದ ಅಚ್ಚರಿಯ ತಾಣವಿದು. ಹಸಿರುಡಿಗೆಪಸೆದುಟ್ಟ ಕೊಡಗಿನ ಚಲುವಿನ ನಡುವೆ ಹರಿವ ಕನ್ನಡ ನಾಡಿನ ಜೀವ ನದಿಯೇ ಕಾವೇರಿ.
ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೊಡವರ ಕುಲದೇವತೆ,ಕನ್ನಡ ಕುಲನಾರಿ ದಕ್ಷಿಣ ಗಂಗೆ,ಕನ್ನಡ ನಾಡಿನ ಜೀವ ನದಿ ಕಾವೇರಿ ಈ ಹೆಸರು ಕೇಳುತ್ತಲೆ ಕೊಡವರು ಪುಳಕಗೊಳ್ಳುತ್ತಾರೆ. ಕಾವೇರಿ ಕೊಡವರ ಆರಾಧ್ಯ ದೇವತೆ. ಪ್ರತಿ ವರ್ಷ ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ತೀರ್ಥೋದ್ಬವದ ಪುಣ್ಯಕಾಲದಲ್ಲಿ ತೀರ್ಥ ರೂಪಿಣಿಯಾಗಿ ಭಕ್ತ ಜನರನ್ನು ಪಾವನಗೊಳಿಸುವ ಕಾವೇರಿ ಮಾತೆ ಸೂರ್ಯನು ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶಿಸಿಸುವ ಪುಣ್ಯಸಮಯದಲ್ಲಿ ತಲಾಕಾವೇರಿಯಲ್ಲಿರುವ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ರೂಪವಾಗಿ ಬರುತ್ತಾಳೆ. ಈ ಪುಣ್ಯ ದಿನದಂದು ಗಂಗೆ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂದುನದಿಗಳು ಅಂತರ್ವಾಹಿನಿಗಳಾಗಿ ಬಂದು ಕಾವೇರಿ ಯಲ್ಲಿ ಸೇರುತ್ತಾರೆಂಬ ಪ್ರತೀತಿ ಇದೆ. ಈದಿನ ಕೊಡಗಿನ ಮನೆ ಮನೆಗಳಲ್ಲಿ ಕಾವೇರಿ ಸಂಕ್ರಾಂತಿ ಅಥವಾ ತುಲಾಸಂಕ್ರಾತಿ ಎಂಬ ಪವಿತ್ರ ಹಬ್ಬವು ಹೌದು. ಇದು ಕೊಡವರ ಏಕೈಕ ಸಸ್ಯಹಾರಿ ಹಬ್ಬ. ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ತಲಕಾವೇರಿ ಯಲ್ಲಿ ನಡೆಯುವ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಬವ ಸರ್ಕಾರದ ಮಾರ್ಗ ಸೂಚಿಯಂತೆ ನಡೆಯಲಿದೆ.
ತೀರ್ಥೋದ್ಬವದ ದಿನ ಉಕ್ಕಿ ಬರುವ ನೀರನ್ನು ಕೊಡವರು ಪವಿತ್ರ ತೀರ್ಥದಂತೆ ಬಳಸಲು ಜನಮುಗಿ ಬೀಳುತ್ತಾರೆ. ಕೊಡಗಿನ ಬಹುತೇಕ ಮನೆಯಲ್ಲಿ ಒಬ್ಬರಾದರು ತೀರ್ಥೋದ್ಬವ ಸಂದರ್ಭದಲ್ಲಿ ಪಾಲ್ಗೊಂಡು ತೀರ್ಥ ಸಂಗ್ರಹಿಸಿ ತಂದು ತಮ್ಮ ಪೂರ್ವ ಜರಿಗೆ ಎಡೆ ಇಟ್ಟು ನಂತರ ಮನೆಯವರೆಲ್ಲ ಸ್ವಿಕರಿಸುವುದು ಅಲ್ಲದೇ ಕಲ್ಯಾಣಿ ಕೊಳದಲ್ಲಿ ಸ್ಥಾನ ಮಾಡಿ ಪಾವನರಾಗುತ್ತಾರೆ. ಆದರೆ ಈ ವರ್ಪ ತೀರ್ಥೋದ್ಬವ ಸಂಧರ್ಭದಲ್ಲಿ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡ್ಡಿ, ಆತಂಕಗಳಿರುವುದಿಲ್ಲ. ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಯಾರಿಗೂ ತಲಕಾವೇರಿಯ ಕೊಳಕ್ಕೆ ಇಳಿಯಲು ಅವಕಾಶವಿಲ್ಲ. ಬದಲಿಗೆ ಕಾವೇರಿ ತೀರ್ಥವನ್ನು ಭಕ್ತರ ಮೇಲೆ ಸಿಂಪಡಿಸಲಾಗುತ್ತದೆ. ಹೊರ ರಾಜ್ಯ ದಿಂದ ಬರುವವರಿಗೆ ಕೊವಿಡ್ ನೆಗೆಟಿವ್ ಪತ್ರ ಕಡ್ಡಾಯ. ಜನದಟ್ಟಣೆಗೆ ಅವಕಾಶವಿಲ್ಲ.
ದೇವಸ್ಥಾನದ ಸಮೀಪದಲ್ಲಿರುವ ಅಶ್ವಥಮರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಅಗಸ್ತ್ಯ ಮುನಿಗೆ ದರ್ಶನ ನೀಡಿದ ಸ್ಥಳ, ಅಗಸ್ತ್ಯ ರು ನೆಲೆಸಿದ ಪುಣ್ಯ ಭೂಮಿ ಎನ್ನಲಾಗುತ್ತದೆ. ಬ್ರಹ್ಮ ಗಿರಿ ಬೆಟ್ಟದ ಮಡಿಲಲ್ಲಿ ತಲಕಾವೇರಿಯ ಸಣ್ಣ ಬ್ರಹ್ಮಕುಂಡಿಕೆಯಲ್ಲಿ ಹುಟ್ಟಿ ಝರಿಯಂತೆ ಮೇಲುಕ್ಕಿ ಕಲ್ಯಾಣಿಯ ಕೊಳ ಸೇರುತ್ತಾ ಅಲ್ಲಿಂದ ಯಾರ ಕಣ್ಣಿಗೂ ಕಾಣಿಸದೆ ಬೆಟ್ಟದಡಿಯ ಇಳಿಜಾರಿನಲ್ಲಿ ಸದ್ದಿಲ್ಲದೆ ಹರಿಯುತ್ತಾ ಮೇಲ್ಮುಖವಾಗಿ ಕಾಣಿಸಿಕೊಂಡವಳೆ ನಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕನ್ನಿಕೆ ಸುಜ್ಯೋತಿಯರೊಂದಿಗೆ ಸೇರಿಕೋಳ್ಳುತ್ತಾರೆ.
ತುಲಾ ಸಂಕ್ರಮಣದ ವಿಶಿಷ್ಟ ಆಚರಣೆ, ಆಧ್ಯಾತ್ಮಕಗುಣ, ಆನಂದದ ಜೊತೆಗೆ ಸಂಸ್ಕ್ರತಿಯ ವಿಶೇಷ ಸಾಮಗಮವು ಹೌದು. ಕೊಡವರ ಸಸ್ಯ ಹಾರಿ ಹಬ್ಬ ಕಾವೇರಿ ಸಂಕ್ರಮಣಕ್ಕೆ ತನ್ನದೆ ಆದ ಮೌಲ್ಯ ವಿದ್ದು. ಪ್ರಕೃತಿ ಯನ್ನು ಪ್ರೀತಿ ಸುವ, ಪೂಜಿಸುವ ದ್ಯೋತಕವಾಗಿ ತುಲಾ ಸಂಕ್ರಮಣವನ್ನು ಆಚರಿಸುತ್ತಾರೆ. ಈ ದಿನ ಗದ್ದೆ, ಬಾವಿ, ಕೆರೆ, ದನದಕೊಟ್ಟಿಗೆ, ಗೊಬ್ಬರ ಗುಂಡಿಗಳಲ್ಲಿ ಬಿದಿರಿನ ಕೊಲಿಗೆ ಗುಂಬಳ ಬಳ್ಳಿ ಸುತ್ತಿ ಹೂವಿನಿಂದ ಅಲಂಕರಿಸಿ ನೆಡಲಾಗುತ್ತದೆ. ಈ ಶುಭದಿನದಂದು ಮನೆಯಲ್ಲಿ ಕಣಿಪೂಜೆ ಮಾಡುವುದು ಸಂಪ್ರದಾಯ. ಕಣಿ ಪೂಜಿಸುವುದು ಅಂದರೆ ಪ್ರಕೃತಿ ಹಾಗೂ ಭೂಮಿಯನ್ನು ಪೂಜಿಸುವುದು ಎಂದು ಅರ್ಥ. ತುಲಾ ಸಂಕ್ರಮಣದಂದು ಕೊಡಗಿನ ಮಹಿಳೆಯರು ಹೂಗಳನ್ನು ತಂದು ಕಂಚಿನ ಬಟ್ಟಲಲ್ಲಿ ಕೆಂಪು ರೇಷ್ಮೆ ವಸ್ತ್ರವನ್ನು ತ್ರಿಕೋನವಾಗಿ ಮಡಚಿಇಟ್ಟು ಅದರಲ್ಲಿ ತೆಂಗಿನಕಾಯಿ ಮತ್ತು ಸೌತೆಕಾಯಿಯನ್ನು ಸುತ್ತಿಹೂ, ಎಲೆ, ಅಡಿಕೆ ಹಾಗೂ ಆಭರಣಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಇಂದು ಕಾವೇರಮ್ಮನ ಜನ್ಮದಿನ ಎಂಬ ಭಕ್ತಿಯಿಂದ ಪೂಜಾದಿಗಳನ್ನು ಸಲ್ಲಿಸುತ್ತಾರೆ.
ಪುಣ್ಯಕ್ಷೇತ್ರ ಗಳಾದ ನಾಗಮಂಡಲ ಮತ್ತು ತಲಕಾವೇರಿಯತ್ತ ನಾವು ದಂಪತಿಗಳು ಮಗನೊಂದಿಗೆ ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ಸೇರುವ ತಿವೇಣಿ ಸಂಗಮದಲ್ಲಿ ದರ್ಶನ ಮುಗಿಸಿ ಅಲ್ಲೆ ಸಮೀಪದ ಪುರಾತನ _ಭಾಗಂಡೇಶ್ವರ ಸ್ವಾಮಿ ದರ್ಶನದ ನಂತರ ಕನ್ನಡ ನಾಡಿನ ಜೀವ ನದಿ ಕಾವೇರಿಯ ಜನ್ಮ ಸ್ಥಳ ತಲಕಾವೇರಿಗೆ ಬೆಳ್ಳಂಬೆಳಗ್ಗೆ ಹೊರಟೆವು. ದಟ್ಟ ಮಂಜಿನ ತೆರೆ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟವಾಗಿ ಹಬ್ಬಿದ ಇಬ್ಬನಿಯ ಸುತ್ತಲೂ ಮಂಜಿನ ಮೋಡಗಳ ದಿಬ್ಬಣ. ಇಬ್ಬನಿಯ ತುಂತುರು ಹನಿಯಲ್ಲಿ ಒದ್ದೆ ಯಾಗುತ್ತಾ ಮೇಲೇರಿದರೆ ಆಕಾಶಾದೆತ್ತರದ ಬ್ರಹ್ಮ ಗಿರಿ ಬೆಟ್ಟದ ತಪ್ಪಲಲ್ಲಿನ ಸಣ್ಣ ಕುಂಡಿಕೆಯಲ್ಲಿ ಚಿಮ್ಮಿ ಕಲ್ಯಾಣಿ ಕೊಳಸೇರುವ ಕಾವೇರಿಗೆ ಕೈಮುಗಿದು ಪೂಜೆ ಸಲ್ಲಿಸಿ ಕಾವೇರಿ ನದಿಯಉಗಮ ಸ್ಥಾನವನ್ನು ನೋಡಿದ ಸಂತಸ ನಮ್ಮದಾಗಿತ್ತು. ತದನಂತರ 350 ಮೆಟ್ಟಿಲುಗಳನ್ನು ಹೊಂದಿದ ಎತ್ತರದ ಬ್ರಹ್ಮ ಗಿರಿಬೆಟ್ಟದ ಶಿಖರವನ್ನೇರಿ ಅಲ್ಲಿಂದ ಕಾಣುವ ಕೊಡಗಿನ ಅವರ್ಣನೀಯ ಅರಣ್ಯ, ನಿಸರ್ಗದ ರಮಣೀಯತೆಯನ್ನು ಮನದಣಿಯೇ ನೋಡಿ ಬಂದೆವು.
ಕಾವೇರಿ ನದಿಯ ಹರಿವಿನಲ್ಲಿ 3 ದ್ವೀಪಗಳು ರಂಗತ್ರಯಗಳೆಂದು ಪ್ರಸಿದ್ಧಿ ಪಡೆದ ಆದಿರಂಗ, ಮಧ್ಯ ರಂಗ,ಅಂತ್ಯರಂಗ ಎಂದು ಕರೆಯುತ್ತಾರೆ. ಪುರಾಣದ ಪ್ರಕಾರ ಕಾವೇರಿ ಕವೇರಮುನಿಯ ಸಾಕುಮಗಳು. ಕೊಡಗಿನ ತಲಕಾವೇರಿಯಲ್ಲಿ ಜನಿಸುವ ಕಾವೇರಿ ಸಪ್ತ ನದಿಗಳಲ್ಲಿ ಒಂದಾದ ಕಾವೇರಿ ದಕ್ಷಿಣ ಭಾರತದ ಗಂಗೆ ಎಂದೆ ಖ್ಯಾತಿ ಪಡೆದಿದೆ. ಆದರೆ ಗಂಗೆಯಂತೆ ಇತ್ತೀಚೆಗೆ ಕಾವೇರಿ ಒಡಲು ಕೂಡ ಕುಲಷಿತಗೊಂಡಿದೆ. ಕಾರ್ಖಾನೆ ಗಳಿಂದ ಹೊರಬರುವ ರಾಸಾಯನಿಕ ವಸ್ತುಗಳು ಚರಂಡಿ ಗಳ ಕೊಳಚೆ ನೀರು ಕಾವೇರಿ ನದಿಗೆ ಸೇರುತ್ತದೆ. ಮಾಲ್ಯಕಾರಕ ವಸ್ತುಗಳು ನದಿಗೆ ಸೇರದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ.
ಕಾವೇರಿ ನದಿ ಉಗಮವಾದ ಹಿನ್ನೆಲೆ:
ಬ್ರಹ್ಮ ನ ಮಗಳಾದ ಲೋಪಮುದ್ರೆಯು ಲೋಕೊದ್ದರಕ್ಕಾಗಿ ಭೂಲೋಕದಲ್ಲಿ ವಾಸಿಸುತ್ತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನ ಕುರಿತು ತಪಸ್ಸನ್ನು ಮಾಡಿ ವರಪಡೆದನು.ಅಗಸ್ತ್ಯ ಮಾಹಾಮುನಿಗಳು ಲೋಪಮುದ್ರೆಯನ್ನು ಮದುವೆ ಆಗುವ ಇಚ್ಚೆಯನ್ನು ವ್ಯಕ್ತಪಡಿಸುತ್ತಾರೆ. ಲೋಪಮುದ್ರೆ ಮೊದಲು ನಿರಾಕರಿಸಿ ನಂತರ ಅಗಸ್ತ್ಯ ಮುನಿಯ ಬೇಟಿಯಾದಾಗ ತನ್ನನ್ನು ಎಂದೂ ಕಾಯಿಸಬಾರದು . ಕಾಯಿಸಿದರೆ ನಾನು ಸ್ವತಂತ್ರಳು ಅದಕ್ಕೆ ಒಪ್ಪಿದರೆ ಮದುವೆ ಆಗುವುದಾಗಿ ಹೇಳುತ್ತಾಳೆ. ಮುನಿಗಳು ಒಪ್ಪಿ ಮದುವೆಯಾಗುತ್ತಾರೆ.
ಒಂದು ದಿನ ಅಗಸ್ತ್ಯ ಮುನಿಗಳು ತನ್ನ ಶಿಷ್ಯರಿಗೆ ಪಾಠ ಮಾಡುತ್ತಾ ತಲ್ಲೀನರಾಗಿ ಸಮಯ ಮರೆತು ಬಿಡುತ್ತಾರೆ ಆಗ ಲೋಪ ಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲಕ್ಕೆ ಹಾರಿ ನದಿಯಾಗಿ ಹರಿಯುತ್ತಾಳೆ ಎಂಬ ಹಿನ್ನಲೆ ಇದೆ. ತುಲಾಸಂಕ್ರಮಣದಂದು ಕಾವೇರಿ ನದಿಯಲ್ಲಿ ಸ್ಥಾನಮಾಡಿದರೆ ಸಕಲಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಕೊಡವರ ಸಂಸ್ಕೃತಿ ಸಂಪ್ರದಾಯ ಎಷ್ಟು ವೈವಿಧ್ಯಮಯವೋ ಹಬ್ಬ ಹರಿದಿನಗಳ ಆಚರಣೆ ಅಷ್ಟೇ ವಿಶೇಷ. ಕೊಡವರ ಹೆಚ್ಚಿನ ಆಚರಣೆಗಳಲ್ಲಿ ಬ್ರಾಹ್ಮಣ ರಿಗೆ ಪ್ರಾಶಸ್ತ್ಯ ವಿರುವುದಿಲ್ಲ. ಆದರೆ ಈ ಹಬ್ಬದಲ್ಲಿ ಬ್ರಾಹ್ಮಣರು ಬೇಕು.
ಇಂದು ತುಲಾಸಂಕ್ರಮಣ…ತಲಕಾವೇರಿ ಯಲ್ಲಿ ತೀರ್ಥೋದ್ಬವ ಬ್ರಹ್ಮ ಕೂಂಡಿಯಲ್ಲಿ ಹುಟ್ಟಿ ಕಲ್ಯಾಣಿ ಯಂತ ಕೊಳದಲ್ಲಿ ತುಂಬಿ ಮೈಸೂರು ಮಂಡ್ಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಗೆ ಸೇರುವ ಕಾವೇರಿ ಜೀವಕೋಟಿಗಳ ದಾಹ ಇಂಗಿಸುವ ಕಾವೇರಿಮಾತೆಯನ್ನು ಆರಾಧಿಸುವ ಹಬ್ಬ ನಿಜವಾಗಿಯು ಅರ್ಥ ಗರ್ಭಿತ. ತೀರ್ಥೋದ್ಬವದ ಶುಭಗಳಿಗೆಯಲ್ಲಿ ಕೊಡಗಿನಾದ್ಯಂತ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ. ಕೊಡವ ಮಹಿಳೆಯರು ಹೊಸ ಸೀರೆ ಉಟ್ಟು ಕಾವೇರಿಯನ್ನು ಪೂಜಿಸುತ್ತಾರೆ. ಒಟ್ಟಿನಲ್ಲಿ ಜೀವನದಿಯ ಜಾತ್ರೆಯಸಂಭ್ರಮ, ತುಲಾಸಂಕ್ರಮಣ, ತಲಕಾವೇರಿಯಲ್ಲಿ ತೀರ್ಥೋದ್ಬವ ಎಲ್ಲರಲ್ಲಿ ಹೊಸ ಉಲ್ಲಾಸ ಮೂಡಿಸಲಿ.